Monday, September 15, 2014

ಕೌಟಿಲೀಯ ಅರ್ಥಶಾಸ್ತ್ರ

೧ .ಮೂಲ ಗ್ರಂಥ ಮತ್ತು ಕರ್ತೃ ಪ್ರಶಸ್ತಿ

ವಂಶೇ   ವಿಶಾಲವಂಶ್ವಾನಾಂ  ಋಷೀಣಾಮಿವ  ಭೂಯಸಾಮ್  
ಅಪ್ರತಿಗ್ರಾಹಕಾಣಾಂ  ಯೋ   ಬಭೂತ  ಭುವಿ   ವಿಶ್ರುತಃ ||೧||

ಜಾತವೇದಾ  ಇವಾರ್ಚಿಷ್ಮಾನ್   ವೇದಾನ್   ವೇದವಿದಾಂವರಃ |
ಯೋsಧೀತವಾನ್    ಸುಚತುರಃ   ಚತುರೋಪ್ಯೇಕವೇದವತ್ ||೨||

ಯಸ್ಯಾಭಿಚಾರವಜ್ರೇಣ   ವಜ್ರಜ್ವಲನತೇಜಸಃ   |
ಪಪಾತ   ಮೂಲತಃ  ಶ್ರೀಮಾನ್   ಸುಪರ್ವ  ನಂದಪರ್ವತಃ ||೩||

ಏಕಾಕೀ  ಮಂತ್ರಶಕ್ತ್ಯಾ  ಯಃ   ಶಕ್ತ್ಯಾ ಶಕ್ತಿಧರೋಪಮಃ
ಅಜಹಾರ   ನೃಚಂದ್ರಾಯ   ಚಂದ್ರಗುಪ್ತಾಯ  ಮೇದಿನೀಮ್ ||೪||

ನೀತಿಶಾಸ್ತ್ರಾಮೃತಂ   ಧೀಮಾನ್  ಅರ್ಥಶಾಸ್ತ್ರ  ಮಹೋದಧೇಃ |
ಸಮದ್ದಧ್ರೇ  ನಮಸ್ತಸ್ಮೈ  ವಿಷ್ಣುಗುಪ್ತಾಯ  ವೇಧಸೇ ||೫||

(ಲೋಕದಲ್ಲಿ  ಪ್ರಸಿದ್ಧನಾದ  ಯಾರು  ವಿಶಾಲವಾದ   ವಂಶವುಳ್ಳ  ಶ್ರೇಷ್ಠರಾದ  ಋಷಿಗಳಂತಿರುವ, ದಾನವನ್ನು  ಸ್ವೀಕರಿಸದವರ  ವಂಶದಲ್ಲಿ   ಜನಿಸಿದ್ದನೋ , ಅತ್ಯಂತ   ನಿಪುಣನಾದ   ಯಾರು  (ವೇದಗಳೊಡನೆ    ಜನಿಸಿದ )ಅಗ್ನಿಯಂತೆ  ತೇಜಸ್ವಿಯಾಗಿ   ಪ್ರಜ್ವಲಿಸುತ್ತಿದ್ದು   ವೇದಾರ್ಥ  ತಿಳಿದವರಲ್ಲಿ   ಶ್ರೇಷ್ಠನಾಗಿ   ನಾಲ್ಕು  ವೇದಗಳನ್ನೂ    ಒಂದೇ  ವೇದದಂತೆ  ಅಧ್ಯಯನ  ಮಾಡಿದನೋ ,


ವಜ್ರ ಮತ್ತು  ಅಗ್ನಿಗಳಂತೆ   ತೇಜಸ್ವಿಯಾದ  ಯಾರ  ಅಭಿಚಾರ  ಪ್ರಯೋಗವೆಂಬ   ವಜ್ರಾಘಾತದಿಂದ   ಪರ್ವತ   ಸದೃಶನಾದ   (ಭಾರತ ಸಾಮ್ರಾಟ್ )ನಂದದೇವನು  ಬುಡಸಹಿತನಾಗಿ  ಕೆಳಗುರುಳಿದನೋ,
ಶಕ್ತಿಧರನಾದ   ಷಣ್ಮುಖನಿಗೆ  ಸಮನಾದ  ಯಾರು   ಮಂತ್ರಶಕ್ತಿಯಿಂದ   ತಾನೊಬ್ಬನೇ    ಪುರುಷಚಂದ್ರಗುಪ್ತನಿಗೆ  ಈ ಭಾರತ  ಭೂಮಿಯನ್ನು   ಜಯಿಸಿಕೊಟ್ಟನೋ ,

ಅರ್ಥಶಾಸ್ತ್ರವೆಂಬ   ಮಹಾಸಮುದ್ರವನ್ನು   ಮಥಿಸಿ   ಯಾವ   ಜ್ಞಾನಿಯು ನೀತಿ  ಶಾಸ್ತ್ರವೆಂಬ   ಅಮೃತವನ್ನು     ಹೊರೆತೆಗೆದನೋ   ಆ ವಿಷ್ಣುಗುಪ್ತ   ಪರಬ್ರಹ್ಮನಿಗೆ   ನಮಸ್ಕಾರಗಳು)

ಈ ಮೇಲಿನ  ಶ್ಲೋಕಗಳು   ಆಚಾರ್ಯ  ವಿಷ್ಣುಗುಪ್ತನ ಶಿಷ್ಯನಾಗಿದ್ದು,    ತದನಂತರ  ಕಾಲದಲ್ಲಿ   ಈ ಅರ್ಥಶಾಸ್ತ್ರದ ಮುಖ್ಯ  ಘಟ್ಟಗಳನ್ನು   ಮೊವತ್ತೆರಡು  ಪ್ರಕರಣಗಳಲ್ಲಿ   ಸಂಗ್ರಹಿಸಿ    ಬರೆದಿರುವ    "ಕಾಮಂದಕ"ನು ತನ್ನ   "ಕಾಮಂದಕ  ನೀತಿಸಾರ"ದ  ಪ್ರಾರಂಭದಲ್ಲಿ    ಗುರು   ನಮಸ್ಕಾರ  ರೂಪವಾಗಿ   ಬರೆದ  ಮಂಗಳ  ಪದ್ಯಗಳು .

ಈ ಮಂಗಳ ಪದ್ಯಗಳಲ್ಲಿ  ಅವನ   ಸಾಕ್ಷಾತ್  ಶಿಷ್ಯ(ಕಾಮಂದಕ)ನು   ತನ್ನ  ಗುರುವಿನ   ಪ್ರಭಾವವನ್ನು     ಯಥಾರ್ಥವಾಗಿ   ವರ್ಣಿಸಿದ್ದಾನೆ .   ಆಚಾರ್ಯ  ವಿಷ್ಣುಗುಪ್ತನ   ವಂಶದ  ಶ್ರೇಷ್ಠತೆ,ಅವನ  ಶ್ರೋತ್ರಿಯತ್ವ ಮತ್ತು   ಅಕಾಮಹತತ್ವ,   ನಂದನಿಗ್ರಹ ಮತ್ತು   ಚಂದ್ರ ಗುಪ್ತಾನುಗ್ರಹ  ರೂಪವಾದ ರಾಜ್ಯ   ಪರಿವರ್ತನೆ    ಅಲ್ಲದೆ   ಅರ್ಥಶಾಸ್ತ್ರ  ಮಹಾಸಮುದ್ರದಿಂದ  ಈ ನೀತಿ  ಶಾಸ್ತ್ರಾಮೃತ  ಸಮುದ್ಧರಣಗಳೆಂಬ   ಅದ್ಭುತ  ಕೃತಿಗಳನ್ನು     ಸ್ತುತಿರೂಪವಾಗಿ   ವರ್ಣಿಸಿ  ,ಅವನನ್ನು   ಸಾಕ್ಷಾತ್   ಪರಬ್ರಹ್ಮನೆಂದು  ಭಾವಿಸಿ   ನಮಿಸಿದ್ದಾನೆ .

ಆಚಾರ್ಯ  ವಿಷ್ಣುಗುಪ್ತನ   ಚರಿತ್ರೆಯು ವಿಷ್ಣುಪುರಾಣದಲ್ಲಿ   ಸೂಚಿತವಾಗಿದೆ  ಮತ್ತು   ವಿಶಾಲದತ್ತನ   ಮುದ್ರಾರಾಕ್ಷಸ  ನಾಟಕದಿಂದ   ವಿಶದವಾಗಿ   ತಿಳಿಯುತ್ತದೆ  ಮತ್ತು   ವಿಶಾಖದತ್ತನ   ಮುದ್ರಾರಾಕ್ಷಸ   ನಾಟಕದಿಂದ   ವಿಶದವಾಗಿ    ತಿಳಿಯುತ್ತದೆ.   ಇಂದಿನ   ಯುಗದ    ಭೌತಿಕ  ವಿಜ್ಞಾನದಲ್ಲಿ   ಅತ್ಯಂತ   ಪ್ರಗತಿಯನ್ನು    ಸಾಧಿಸಿಯೊ  ಮತ್ತು ಸಾಧಿಸುತ್ತಲೂ  ಇರುವ   ರಷ್ಯಾದೇಶದವರು ಆ ನಾಟಕವನ್ನು   ತಮ್ಮ    ಭಾಷೆಯಲ್ಲಿ  ಪರಿವರ್ತನೆಮಾಡಿಸಿ   ತಿಳಿದುಕೊಂಡು   ಮೆಚ್ಚಿದ್ದಾರೆಂಬುದು   ನಮ್ಮ    ದೇಶದವರು    ಹೆಮ್ಮೆ ಪಡಬೇಕಾದ ಅಂಶ .

ಬೃಹತ್  ಕಥಾಮಂಜರಿ   (ಕ್ಷೇಮೇಂದ್ರ),   ಕಥಾಸರಿತ್ಸಾಗರ (ಸೋಮದೇವ),  ಪಂಚತಂತ್ರ (ವಿಷ್ಣುಶರ್ಮ),  ದಶಕುಮಾರ  ಚರಿತ (ದಂಡಿ ಕವಿ)  ಮುಂತಾದ   ಗ್ರಂಥಗಳು  ಆಚಾರ್ಯ   ವಿಷ್ಣುಗುಪ್ತ   (ಕೌಟಿಲ್ಯ)ನ   ಚರಿತ್ರೆ ಮತ್ತು   ಅರ್ಥಶಾಸ್ತ್ರಗಳನ್ನು   ಪ್ರಸ್ತಾಪಿಸುತ್ತವೆ. 

ಮಹಾಕವಿಗಳಾದ   ಭಾಸ ,ಕಾಳಿದಾಸ,ಮಾಘ ಮತ್ತು  ಭಾರವಿಗಳು ತಮ್ಮ   ಕಾವ್ಯ  ನಾಟಕಗಳಲ್ಲಿ   ಈ ಅರ್ಥಶಾಸ್ತ್ರದ   ತತ್ತ್ವಗಳನ್ನು  ಇದರಲ್ಲಿರುವ  ಶಬ್ದಗಳಿಂದಲೇ    ಶ್ಲೋಕರೂಪವಾಗಿ   ಪ್ರತಿಪಾದಿಸಿರುವುದು   ಸ್ಪಷ್ಟವಾಗಿ  ಗೊತ್ತಾ ಗುತ್ತದೆ .  ಅವುಗಳನ್ನೆಲ್ಲ   ವಿಶದವಾಗಿ    ಉಲ್ಲೇಖಿಸುವುದು  ತುಂಬ  ವಿಸ್ತಾರವಾಗುವುದರಿಂದ    ಬಿಟ್ಟಿದೆ .

ಕಾಳಿದಾಸ ,ಭಾರವಿ,ಮಾಘರ ಕಾವ್ಯಗಳ   ಸುಪ್ರಸಿದ್ದ  ವ್ಯಾಖ್ಯಾನಕರ್ತನಾದ   ಮಲ್ಲಿನಾಥನು  ತನ್ನ   "ಸಂಜೀವಿನಿ" ಮತ್ತು  "ಘಂಟಾಪಥ"ಗಳಲ್ಲಿ    "ಯದಾsಹ   ಕೌಟಿಲ್ಯ" ಎಂದು  ಅರ್ಥಶಾಸ್ತ್ರದ   ಕೆಲವು   ವಾಕ್ಯಗಳನ್ನು    ಉಲ್ಲೇಖಿಸುತ್ತಾನೆ  .     ಇದರಿಂದಾಗಿ   ಈ ಅರ್ಥಶಾಸ್ತ್ರ (Theory )ವನ್ನು   ಪ್ರಾಯೋಗಿಕ  (practical )ವಾಗಿ   ವಿವರಿಸಲು  ಆ ಕಾವ್ಯ ,ನಾಟಕಗಳು    ಜನ್ಮತಾಳಿವೆಯೆಂಬುದು ಸ್ಪಷ್ಟವಾಗುತ್ತದೆ.

ಅಹಿಂಸಾಪ್ರಧಾನವಾದ ಬೌದ್ಧಮತವನ್ನಂಗೀಕರಿಸಿದ    ಹರ್ಷನನ್ನಾಶ್ರಯಿಸಿಕೊಂಡಿದ್ದ ಬಾಣಕವಿಯು  ತನ್ನ   ಕಾದಂಬರಿಯಲ್ಲಿ    ಅರ್ಥಶಾಸ್ತ್ರವನ್ನು    ಪ್ರಸ್ತಾಪಿಸಿ     ಅದರಲ್ಲಿ    ಹೇಳಿರುವ  ಒಳ್ಳೆಯ ಭಾಗಗಳನ್ನು   ಪ್ರಾಮುಖ್ಯವಾಗಿ ಪರಿಗಣಿಸದೆ     ಹಿಂಸಾ  ವಿಧಾನಗಳನ್ನು    ಮಾತ್ರ   ಎತ್ತಿಕೊಂಡು   ಖಂಡಿಸಿದ್ದಾನೆ   .ಅದರಿಂದಾಗಿ   ಈ ಅರ್ಥಶಾಸ್ತ್ರವು ಕೆಲವು  ಕಾಲ  ಪಂಡಿತರ   ಉಪೇಕ್ಷೆಗೆ ಪಾತ್ರವಾಗಿದ್ದಿರಬಹುದು  . ನಂದಿಸೂತ್ರವೆಂಬ   ಜೈನಗ್ರಂಥದಲ್ಲಿ   ಮಿಥ್ಯಾಶಾಸ್ತ್ರ  ಪಟ್ಟಿಯೊಳಗೆ     ರಾಮಾಯಣ   ಮಹಾಭಾರತಗಳೊಡನೆ   ಅರ್ಥಶಾಸ್ತ್ರವೂ ಸೇರಿಸಲ್ಪಟ್ಟಿದೆ .   


No comments:

Post a Comment