೧ .ಮೂಲ ಗ್ರಂಥ ಮತ್ತು ಕರ್ತೃ ಪ್ರಶಸ್ತಿ
ವಂಶೇ ವಿಶಾಲವಂಶ್ವಾನಾಂ ಋಷೀಣಾಮಿವ ಭೂಯಸಾಮ್
ಅಪ್ರತಿಗ್ರಾಹಕಾಣಾಂ ಯೋ ಬಭೂತ ಭುವಿ ವಿಶ್ರುತಃ ||೧||
ಜಾತವೇದಾ ಇವಾರ್ಚಿಷ್ಮಾನ್ ವೇದಾನ್ ವೇದವಿದಾಂವರಃ |
ಯೋsಧೀತವಾನ್ ಸುಚತುರಃ ಚತುರೋಪ್ಯೇಕವೇದವತ್ ||೨||
ಯಸ್ಯಾಭಿಚಾರವಜ್ರೇಣ ವಜ್ರಜ್ವಲನತೇಜಸಃ |
ಪಪಾತ ಮೂಲತಃ ಶ್ರೀಮಾನ್ ಸುಪರ್ವ ನಂದಪರ್ವತಃ ||೩||
ಏಕಾಕೀ ಮಂತ್ರಶಕ್ತ್ಯಾ ಯಃ ಶಕ್ತ್ಯಾ ಶಕ್ತಿಧರೋಪಮಃ |
ಅಜಹಾರ ನೃಚಂದ್ರಾಯ ಚಂದ್ರಗುಪ್ತಾಯ ಮೇದಿನೀಮ್ ||೪||
ನೀತಿಶಾಸ್ತ್ರಾಮೃತಂ ಧೀಮಾನ್ ಅರ್ಥಶಾಸ್ತ್ರ ಮಹೋದಧೇಃ |
ಸಮದ್ದಧ್ರೇ ನಮಸ್ತಸ್ಮೈ ವಿಷ್ಣುಗುಪ್ತಾಯ ವೇಧಸೇ ||೫||
(ಲೋಕದಲ್ಲಿ ಪ್ರಸಿದ್ಧನಾದ ಯಾರು ವಿಶಾಲವಾದ ವಂಶವುಳ್ಳ ಶ್ರೇಷ್ಠರಾದ ಋಷಿಗಳಂತಿರುವ, ದಾನವನ್ನು ಸ್ವೀಕರಿಸದವರ ವಂಶದಲ್ಲಿ ಜನಿಸಿದ್ದನೋ , ಅತ್ಯಂತ ನಿಪುಣನಾದ ಯಾರು (ವೇದಗಳೊಡನೆ ಜನಿಸಿದ )ಅಗ್ನಿಯಂತೆ ತೇಜಸ್ವಿಯಾಗಿ ಪ್ರಜ್ವಲಿಸುತ್ತಿದ್ದು ವೇದಾರ್ಥ ತಿಳಿದವರಲ್ಲಿ ಶ್ರೇಷ್ಠನಾಗಿ ನಾಲ್ಕು ವೇದಗಳನ್ನೂ ಒಂದೇ ವೇದದಂತೆ ಅಧ್ಯಯನ ಮಾಡಿದನೋ ,
ವಜ್ರ ಮತ್ತು ಅಗ್ನಿಗಳಂತೆ ತೇಜಸ್ವಿಯಾದ ಯಾರ ಅಭಿಚಾರ ಪ್ರಯೋಗವೆಂಬ ವಜ್ರಾಘಾತದಿಂದ ಪರ್ವತ ಸದೃಶನಾದ (ಭಾರತ ಸಾಮ್ರಾಟ್ )ನಂದದೇವನು ಬುಡಸಹಿತನಾಗಿ ಕೆಳಗುರುಳಿದನೋ,
ಶಕ್ತಿಧರನಾದ ಷಣ್ಮುಖನಿಗೆ ಸಮನಾದ ಯಾರು ಮಂತ್ರಶಕ್ತಿಯಿಂದ ತಾನೊಬ್ಬನೇ ಪುರುಷಚಂದ್ರಗುಪ್ತನಿಗೆ ಈ ಭಾರತ ಭೂಮಿಯನ್ನು ಜಯಿಸಿಕೊಟ್ಟನೋ ,
ಅರ್ಥಶಾಸ್ತ್ರವೆಂಬ ಮಹಾಸಮುದ್ರವನ್ನು ಮಥಿಸಿ ಯಾವ ಜ್ಞಾನಿಯು ನೀತಿ ಶಾಸ್ತ್ರವೆಂಬ ಅಮೃತವನ್ನು ಹೊರೆತೆಗೆದನೋ ಆ ವಿಷ್ಣುಗುಪ್ತ ಪರಬ್ರಹ್ಮನಿಗೆ ನಮಸ್ಕಾರಗಳು)
ಈ ಮೇಲಿನ ಶ್ಲೋಕಗಳು ಆಚಾರ್ಯ ವಿಷ್ಣುಗುಪ್ತನ ಶಿಷ್ಯನಾಗಿದ್ದು, ತದನಂತರ ಕಾಲದಲ್ಲಿ ಈ ಅರ್ಥಶಾಸ್ತ್ರದ ಮುಖ್ಯ ಘಟ್ಟಗಳನ್ನು ಮೊವತ್ತೆರಡು ಪ್ರಕರಣಗಳಲ್ಲಿ ಸಂಗ್ರಹಿಸಿ ಬರೆದಿರುವ "ಕಾಮಂದಕ"ನು ತನ್ನ "ಕಾಮಂದಕ ನೀತಿಸಾರ"ದ ಪ್ರಾರಂಭದಲ್ಲಿ ಗುರು ನಮಸ್ಕಾರ ರೂಪವಾಗಿ ಬರೆದ ಮಂಗಳ ಪದ್ಯಗಳು .
ಈ ಮಂಗಳ ಪದ್ಯಗಳಲ್ಲಿ ಅವನ ಸಾಕ್ಷಾತ್ ಶಿಷ್ಯ(ಕಾಮಂದಕ)ನು ತನ್ನ ಗುರುವಿನ ಪ್ರಭಾವವನ್ನು ಯಥಾರ್ಥವಾಗಿ ವರ್ಣಿಸಿದ್ದಾನೆ . ಆಚಾರ್ಯ ವಿಷ್ಣುಗುಪ್ತನ ವಂಶದ ಶ್ರೇಷ್ಠತೆ,ಅವನ ಶ್ರೋತ್ರಿಯತ್ವ ಮತ್ತು ಅಕಾಮಹತತ್ವ, ನಂದನಿಗ್ರಹ ಮತ್ತು ಚಂದ್ರ ಗುಪ್ತಾನುಗ್ರಹ ರೂಪವಾದ ರಾಜ್ಯ ಪರಿವರ್ತನೆ ಅಲ್ಲದೆ ಅರ್ಥಶಾಸ್ತ್ರ ಮಹಾಸಮುದ್ರದಿಂದ ಈ ನೀತಿ ಶಾಸ್ತ್ರಾಮೃತ ಸಮುದ್ಧರಣಗಳೆಂಬ ಅದ್ಭುತ ಕೃತಿಗಳನ್ನು ಸ್ತುತಿರೂಪವಾಗಿ ವರ್ಣಿಸಿ ,ಅವನನ್ನು ಸಾಕ್ಷಾತ್ ಪರಬ್ರಹ್ಮನೆಂದು ಭಾವಿಸಿ ನಮಿಸಿದ್ದಾನೆ .
ಆಚಾರ್ಯ ವಿಷ್ಣುಗುಪ್ತನ ಚರಿತ್ರೆಯು ವಿಷ್ಣುಪುರಾಣದಲ್ಲಿ ಸೂಚಿತವಾಗಿದೆ ಮತ್ತು ವಿಶಾಲದತ್ತನ ಮುದ್ರಾರಾಕ್ಷಸ ನಾಟಕದಿಂದ ವಿಶದವಾಗಿ ತಿಳಿಯುತ್ತದೆ ಮತ್ತು ವಿಶಾಖದತ್ತನ ಮುದ್ರಾರಾಕ್ಷಸ ನಾಟಕದಿಂದ ವಿಶದವಾಗಿ ತಿಳಿಯುತ್ತದೆ. ಇಂದಿನ ಯುಗದ ಭೌತಿಕ ವಿಜ್ಞಾನದಲ್ಲಿ ಅತ್ಯಂತ ಪ್ರಗತಿಯನ್ನು ಸಾಧಿಸಿಯೊ ಮತ್ತು ಸಾಧಿಸುತ್ತಲೂ ಇರುವ ರಷ್ಯಾದೇಶದವರು ಆ ನಾಟಕವನ್ನು ತಮ್ಮ ಭಾಷೆಯಲ್ಲಿ ಪರಿವರ್ತನೆಮಾಡಿಸಿ ತಿಳಿದುಕೊಂಡು ಮೆಚ್ಚಿದ್ದಾರೆಂಬುದು ನಮ್ಮ ದೇಶದವರು ಹೆಮ್ಮೆ ಪಡಬೇಕಾದ ಅಂಶ .
ಬೃಹತ್ ಕಥಾಮಂಜರಿ (ಕ್ಷೇಮೇಂದ್ರ), ಕಥಾಸರಿತ್ಸಾಗರ (ಸೋಮದೇವ), ಪಂಚತಂತ್ರ (ವಿಷ್ಣುಶರ್ಮ), ದಶಕುಮಾರ ಚರಿತ (ದಂಡಿ ಕವಿ) ಮುಂತಾದ ಗ್ರಂಥಗಳು ಆಚಾರ್ಯ ವಿಷ್ಣುಗುಪ್ತ (ಕೌಟಿಲ್ಯ)ನ ಚರಿತ್ರೆ ಮತ್ತು ಅರ್ಥಶಾಸ್ತ್ರಗಳನ್ನು ಪ್ರಸ್ತಾಪಿಸುತ್ತವೆ.
ಮಹಾಕವಿಗಳಾದ ಭಾಸ ,ಕಾಳಿದಾಸ,ಮಾಘ ಮತ್ತು ಭಾರವಿಗಳು ತಮ್ಮ ಕಾವ್ಯ ನಾಟಕಗಳಲ್ಲಿ ಈ ಅರ್ಥಶಾಸ್ತ್ರದ ತತ್ತ್ವಗಳನ್ನು ಇದರಲ್ಲಿರುವ ಶಬ್ದಗಳಿಂದಲೇ ಶ್ಲೋಕರೂಪವಾಗಿ ಪ್ರತಿಪಾದಿಸಿರುವುದು ಸ್ಪಷ್ಟವಾಗಿ ಗೊತ್ತಾ ಗುತ್ತದೆ . ಅವುಗಳನ್ನೆಲ್ಲ ವಿಶದವಾಗಿ ಉಲ್ಲೇಖಿಸುವುದು ತುಂಬ ವಿಸ್ತಾರವಾಗುವುದರಿಂದ ಬಿಟ್ಟಿದೆ .
ಕಾಳಿದಾಸ ,ಭಾರವಿ,ಮಾಘರ ಕಾವ್ಯಗಳ ಸುಪ್ರಸಿದ್ದ ವ್ಯಾಖ್ಯಾನಕರ್ತನಾದ ಮಲ್ಲಿನಾಥನು ತನ್ನ "ಸಂಜೀವಿನಿ" ಮತ್ತು "ಘಂಟಾಪಥ"ಗಳಲ್ಲಿ "ಯದಾsಹ ಕೌಟಿಲ್ಯ" ಎಂದು ಅರ್ಥಶಾಸ್ತ್ರದ ಕೆಲವು ವಾಕ್ಯಗಳನ್ನು ಉಲ್ಲೇಖಿಸುತ್ತಾನೆ . ಇದರಿಂದಾಗಿ ಈ ಅರ್ಥಶಾಸ್ತ್ರ (Theory )ವನ್ನು ಪ್ರಾಯೋಗಿಕ (practical )ವಾಗಿ ವಿವರಿಸಲು ಆ ಕಾವ್ಯ ,ನಾಟಕಗಳು ಜನ್ಮತಾಳಿವೆಯೆಂಬುದು ಸ್ಪಷ್ಟವಾಗುತ್ತದೆ.
ಅಹಿಂಸಾಪ್ರಧಾನವಾದ ಬೌದ್ಧಮತವನ್ನಂಗೀಕರಿಸಿದ ಹರ್ಷನನ್ನಾಶ್ರಯಿಸಿಕೊಂಡಿದ್ದ ಬಾಣಕವಿಯು ತನ್ನ ಕಾದಂಬರಿಯಲ್ಲಿ ಅರ್ಥಶಾಸ್ತ್ರವನ್ನು ಪ್ರಸ್ತಾಪಿಸಿ ಅದರಲ್ಲಿ ಹೇಳಿರುವ ಒಳ್ಳೆಯ ಭಾಗಗಳನ್ನು ಪ್ರಾಮುಖ್ಯವಾಗಿ ಪರಿಗಣಿಸದೆ ಹಿಂಸಾ ವಿಧಾನಗಳನ್ನು ಮಾತ್ರ ಎತ್ತಿಕೊಂಡು ಖಂಡಿಸಿದ್ದಾನೆ .ಅದರಿಂದಾಗಿ ಈ ಅರ್ಥಶಾಸ್ತ್ರವು ಕೆಲವು ಕಾಲ ಪಂಡಿತರ ಉಪೇಕ್ಷೆಗೆ ಪಾತ್ರವಾಗಿದ್ದಿರಬಹುದು . ನಂದಿಸೂತ್ರವೆಂಬ ಜೈನಗ್ರಂಥದಲ್ಲಿ ಮಿಥ್ಯಾಶಾಸ್ತ್ರ ಪಟ್ಟಿಯೊಳಗೆ ರಾಮಾಯಣ ಮಹಾಭಾರತಗಳೊಡನೆ ಅರ್ಥಶಾಸ್ತ್ರವೂ ಸೇರಿಸಲ್ಪಟ್ಟಿದೆ .
No comments:
Post a Comment